ಬೆಂಗಳೂರು: ಎಲ್ಪಿಜಿ (LPG) ಇಂಧನ ಪೂರೈಕೆಯಲ್ಲಿ ಉಂಟಾಗಿರುವ ತೀವ್ರ ವ್ಯತ್ಯಯದಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ತಕ್ಷಣ ₹15,000 ಪರಿಹಾರ ಘೋಷಿಸಬೇಕೆಂದು ಆಮ್ ಆದ್ಮಿ ಪಕ್ಷ (AAP) ಕರ್ನಾಟಕ ಒತ್ತಾಯಿಸಿದೆ.
ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಆಟೋ ಘಟಕದ ಅಧ್ಯಕ್ಷ ಆಯುಬ್ ಖಾನ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಚುನಾವಣಾ ಗುದ್ದಾಟದ ಪರಿಣಾಮವಾಗಿ ಎಲ್ಪಿಜಿ ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಇದರ ನೇರ ಹೊರೆ ಬಡ ಆಟೋ ಚಾಲಕರ ಮೇಲೆ ಬಿದ್ದಿದೆ ಎಂದು ಆರೋಪಿಸಿದರು.
ಕೇಂದ್ರ–ರಾಜ್ಯ ಸರ್ಕಾರಗಳ ವೈಫಲ್ಯ ಆರೋಪ
“ಮಧ್ಯಪ್ರಾಚ್ಯದ ಯುದ್ಧದ ಪರಿಣಾಮಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ದೇಶದಾದ್ಯಂತ ಸೂಕ್ತ ಇಂಧನ ವ್ಯವಸ್ಥೆ ರೂಪಿಸದ ಪರಿಣಾಮ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ,” ಎಂದು ಅವರು ಹೇಳಿದರು.
ಇನ್ನೊಂದೆಡೆ, ರಾಜ್ಯ ಸರ್ಕಾರ ಉಪಚುನಾವಣೆಗಳಲ್ಲಿ ತೊಡಗಿಸಿಕೊಂಡು ಕಾಳಸಂತೆಯನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ. ಗ್ಯಾಸ್ ಸಿಲಿಂಡರ್ಗಳು ಮತ್ತು ಎಲ್ಪಿಜಿ ಬಂಕ್ಗಳಲ್ಲಿ ದುಪ್ಪಟ್ಟು ದರದಲ್ಲಿ ಕಾಳಸಂತೆ ನಡೆಯುತ್ತಿದ್ದು, ತೂಕ ಮತ್ತು ಮಾಪನ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.
15 ದಿನಗಳಿಂದ ಕೆಲಸವಿಲ್ಲ: ಸಂಕಷ್ಟದಲ್ಲಿರುವ ಚಾಲಕರು
ಎಲ್ಪಿಜಿ ಕೊರತೆಯಿಂದ ಕಳೆದ 15 ದಿನಗಳಿಂದ ಅನೇಕ ಆಟೋ ಚಾಲಕರು ವಾಹನಗಳನ್ನು ರಸ್ತೆಗೆ ಇಳಿಸಲಾಗದೆ ಜೀವನ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನನಿತ್ಯದ ಆದಾಯದ ಮೇಲೆ ಬದುಕು ಸಾಗಿಸುವ ಕುಟುಂಬಗಳು ತೀವ್ರ ಸಂಕಷ್ಟ ಅನುಭವಿಸುತ್ತಿವೆ ಎಂದು ಅವರು ವಿವರಿಸಿದರು.
ಸರ್ಕಾರಕ್ಕೆ ತಕ್ಷಣದ ಕ್ರಮಕ್ಕೆ ಆಗ್ರಹ
ಆಟೋ ಚಾಲಕರೊಂದಿಗೆ ಜೊತೆಗೆ ಸಣ್ಣ ಹೋಟೆಲ್ ಮಾಲೀಕರು, ಗಿಗ್ ಕಾರ್ಮಿಕರ ಜೀವನವೂ ಹದಗೆಟ್ಟಿದ್ದು, ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಿ ₹15,000 ಸಹಾಯಧನ ಘೋಷಿಸಿ ನೆರವಾಗಬೇಕು ಎಂದು ಆಯುಬ್ ಖಾನ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಸೀತಾರಾಮ್ ಗುಂಡಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್, ಅನಿಲ್, ಎ.ಜೆ. ಖಾನ್ ಹಾಗೂ ಆಟೋ ಚಾಲಕರು ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.




