ಜೆಎಸ್ಡಬ್ಲ್ಯೂ ವಿಜಯನಗರ ಮೆಟಾಲಿಕ್ಸ್ ಕಾರ್ಖಾನೆಯಲ್ಲಿ ಮೃತಪಟ್ಟ ಯುವ ಇಂಜಿನಿಯರ್ಗಳ ಪೋಷಕರ ನೋವಿನ ಕೂಗು
ಬೆಂಗಳೂರು: ಉನ್ನತ ಕನಸುಗಳನ್ನು ಹೊತ್ತು ಇಂಜಿನಿಯರಿಂಗ್ ಪದವಿ ಪಡೆದಿದ್ದ ಮೂವರು ಯುವಕರು ಕೆಲಸಕ್ಕೆ ಸೇರಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದರು. ಕುಟುಂಬದ ಆಸರೆ ಆಗಬೇಕಿದ್ದ ಆ ಮಕ್ಕಳು ಇಂದು ನೆನಪುಗಳಾಗಿ ಉಳಿದಿದ್ದಾರೆ. ಎರಡು ವರ್ಷದ ಬಳಿಕವೂ ನ್ಯಾಯ ಸಿಗದೆ ಅಲೆದಾಡುತ್ತಿರುವ ಪೋಷಕರು ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ತೋರಣಗಲ್ಲುವಿನ ಜೆಎಸ್ಡಬ್ಲ್ಯೂ ವಿಜಯನಗರ ಮೆಟಾಲಿಕ್ಸ್ ಲಿಮಿಟೆಡ್ (JVML) ಕಾರ್ಖಾನೆಯಲ್ಲಿ 2024ರ ಮೇ 9ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಯುವ ಇಂಜಿನಿಯರ್ಗಳಾದ ಶಿವ ಮಾಗದೇವ್, ಸುಶಾಂತ್ ಕೃಷ್ಣ ಹಾಗೂ ಗಂಟೆ ಜಡಿಯಪ್ಪ ಮೃತಪಟ್ಟಿದ್ದರು. ಈ ದುರ್ಘಟನೆಯ ಬಳಿಕ ಮಕ್ಕಳನ್ನು ಕಳೆದುಕೊಂಡ ಪೋಷಕರಾದ ಮಹೇಶ್–ಫಣಿಕುಮಾರಿ ಹಾಗೂ ಶಿವಮಣಿ–ಆನಂದಮಣಿ ಅವರು ಸುದ್ದಿಗೋಷ್ಠಿಯಲ್ಲಿ ಕಣ್ಣೀರಿನ ನಡುವೆ ನ್ಯಾಯಕ್ಕಾಗಿ ಮನವಿ ಮಾಡಿದರು.
“ನಮ್ಮ ಮಕ್ಕಳು ದೊಡ್ಡ ಕನಸುಗಳೊಂದಿಗೆ ಉದ್ಯೋಗಕ್ಕೆ ಹೋಗಿದ್ದರು. ಮನೆ ಕಟ್ಟಬೇಕು, ತಾಯಿ–ತಂದೆಯರನ್ನು ನೋಡಿಕೊಳ್ಳಬೇಕು ಎಂದು ಮಾತನಾಡುತ್ತಿದ್ದರು. ಆದರೆ ಇಂದು ಅವರ ಫೋಟೋಗಳನ್ನೇ ನೋಡುತ್ತ ಬದುಕಬೇಕಾದ ಪರಿಸ್ಥಿತಿ ಬಂದಿದೆ” ಎಂದು ಪೋಷಕರು ಭಾವುಕರಾದರು.
“ಸುರಕ್ಷತೆ ಇಲ್ಲದ ಕಾರ್ಖಾನೆಯೇ ಮಕ್ಕಳ ಜೀವ ತೆಗೆದುಕೊಂಡಿತು”
ಪೋಷಕರ ಆರೋಪದ ಪ್ರಕಾರ, ಅಪಘಾತ ಸಂಭವಿಸಿದ ವೇಳೆಗೆ ಕಾರ್ಖಾನೆಗೆ ಅಗತ್ಯವಿದ್ದ ಅನೇಕ ಕಾನೂನುಬದ್ಧ ಅನುಮತಿಗಳು ಇರಲಿಲ್ಲ. ಪರಿಸರ ಅನುಮತಿ, ಕಾರ್ಖಾನೆ ಪರವಾನಗಿ, ಕಾರ್ಯಾಚರಣೆಗೆ ಅಗತ್ಯ ಒಪ್ಪಿಗೆ ಸೇರಿದಂತೆ ಹಲವು ದಾಖಲೆಗಳಿಲ್ಲದೇ ಉತ್ಪಾದನಾ ಕಾರ್ಯಾಚರಣೆ ನಡೆಸಲಾಗುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ.
ಅಪಘಾತಕ್ಕೆ ಕಾರಣವಾದ ಪ್ರಮುಖ ಅಂಶಗಳಾಗಿ ಅವರು ಉಲ್ಲೇಖಿಸಿರುವುದು:
- ಸರಿಯಾದ ಅನುಮೋದನೆಗಳಿಲ್ಲದೆ HSM03 ಘಟಕ ನಿರ್ಮಾಣ
- ಮಾನ್ಯ ಪರವಾನಗಿ ಇಲ್ಲದೇ ಉತ್ಪಾದನಾ ಕಾರ್ಯಾಚರಣೆ
- ಸುರಕ್ಷತಾ ಕ್ರಮಗಳ ಸಂಪೂರ್ಣ ಕೊರತೆ
- ನಿರ್ಮಾಣ ಹಾಗೂ ಉತ್ಪಾದನಾ ಚಟುವಟಿಕೆಗಳನ್ನು ಒಂದೇ ವೇಳೆ ನಡೆಸಿದ್ದು
- ಸಮರ್ಪಕ ಸಂವಹನ ಹಾಗೂ ಕಾರ್ಯಾಚರಣಾ ವಿಧಾನಗಳ ಕೊರತೆ
“ಅಧಿಕಾರಿಗಳು ಕಿವಿಗೊಡಲಿಲ್ಲ”
ಮಕ್ಕಳ ಸಾವಿನ ನಂತರ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ ಪೋಷಕರು, ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೂ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಾರ್ಖಾನೆ ಮತ್ತು ಕೈಗಾರಿಕಾ ಸುರಕ್ಷತಾ ಇಲಾಖೆ, ಕಾರ್ಮಿಕ ಇಲಾಖೆ, ಬಳ್ಳಾರಿ ಜಿಲ್ಲಾಡಳಿತ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸೇರಿದಂತೆ ಅನೇಕ ಸಂಸ್ಥೆಗಳಿಗೆ ಮನವಿ ಸಲ್ಲಿಸಿದ್ದರೂ ಸ್ಪಂದನೆ ಸಿಗಲಿಲ್ಲ ಎಂದು ಅವರು ಆರೋಪಿಸಿದರು.
“ಕಾರ್ಖಾನೆಗಳ ಇನ್ಸ್ಪೆಕ್ಟರ್, ಪೊಲೀಸರು ಹಾಗೂ ಜಿಲ್ಲಾಡಳಿತ ಎಲ್ಲರೂ ನಮ್ಮ ಮಾತನ್ನು ಕೇಳದೆ ಮೌನವಾಗಿದ್ದರು. ನಮ್ಮ ಮಕ್ಕಳ ಸಾವಿಗೆ ಕಾರಣವಾದ ಸತ್ಯವನ್ನು ಮುಚ್ಚಿಹಾಕಲು ಪ್ರಯತ್ನ ನಡೆದಿದೆ” ಎಂದು ಪೋಷಕರು ಕಣ್ಣೀರಿಟ್ಟರು.
“ಅಪಘಾತದ ನಂತರವೇ ಅನುಮತಿಗಳು”
ಪೋಷಕರ ಆರೋಪದಂತೆ, ಅಪಘಾತ ಸಂಭವಿಸಿದ ನಂತರವೇ ಹಲವು ಅನುಮತಿಗಳು ಹಾಗೂ ಪರವಾನಗಿಗಳು ನೀಡಲಾಗಿದೆ.
- ಪರಿಸರ ಅನುಮತಿ: 25-07-2024
- ಸೈಟ್ ಪ್ಲಾನ್ ಅನುಮೋದನೆ: 01-08-2024
- ಕಾರ್ಖಾನೆ ಪರವಾನಗಿ: 19-08-2024
- ಕಾರ್ಯಾಚರಣೆಗೆ ಒಪ್ಪಿಗೆ: 23-09-2024
ಅಪಘಾತ ಸಂಭವಿಸಿದ ದಿನದ ವೇಳೆಗೆ ಇವು ಲಭ್ಯವಿರಲಿಲ್ಲ ಎಂದು ಪೋಷಕರು ದಾಖಲೆಗಳೊಂದಿಗೆ ಆರೋಪಿಸಿದ್ದಾರೆ.
ನ್ಯಾಯಾಲಯದ ಮೆಟ್ಟಿಲೇರಿದ ಪೋಷಕರು
ಎಲ್ಲೆಡೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ, ಇದೀಗ ಪೋಷಕರು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದಲ್ಲಿ ರಿಟ್ ಅರ್ಜಿ ಸಂಖ್ಯೆ 100408/2025 ಸಲ್ಲಿಸಿದ್ದಾರೆ.
“ಪ್ರಕರಣ ನಿಧಾನವಾಗಿ ಸಾಗುತ್ತಿದ್ದರೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ನಂಬಿಕೆ ಇದೆ. ನಮ್ಮ ಮಕ್ಕಳಿಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ” ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮನವಿ
ಈ ವೇಳೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿಶೇಷ ಮನವಿ ಮಾಡಿರುವ ಅವರು, ಉದ್ಯೋಗ ಆಯ್ಕೆ ಮಾಡುವ ಮೊದಲು ಕಂಪನಿಯ ಸುರಕ್ಷತಾ ವ್ಯವಸ್ಥೆ ಹಾಗೂ ಕಾನೂನುಬದ್ಧ ಅನುಮತಿಗಳನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದ್ದಾರೆ.
“ದೊಡ್ಡ ಕಂಪನಿ, ದೊಡ್ಡ ಸಂಬಳ ಎಂದು ನಂಬಿ ಮಕ್ಕಳನ್ನು ಕಳುಹಿಸಬೇಡಿ. ಕಾರ್ಖಾನೆಗಳಲ್ಲಿ ಸುರಕ್ಷತೆ ಇದೆಯೇ? ಕಾನೂನುಬದ್ಧ ಅನುಮತಿಗಳಿವೆಯೇ? ಅಲ್ಲಿ ಕೆಲಸ ಮಾಡುವವರ ಪರಿಸ್ಥಿತಿ ಹೇಗಿದೆ? ಎಂಬುದನ್ನು ಪರಿಶೀಲಿಸಿ” ಎಂದು ಮನವಿ ಮಾಡಿದ್ದಾರೆ.
“ನಮ್ಮ ಮಕ್ಕಳನ್ನು ನಾವು ಕಳೆದುಕೊಂಡಿದ್ದೇವೆ. ಇನ್ನೊಬ್ಬ ಪೋಷಕರ ಮನೆಗೆ ಈ ದುಃಖ ಬರಬಾರದು” ಎಂಬ ಪೋಷಕರ ಮಾತು ಸುದ್ದಿಗೋಷ್ಠಿಯಲ್ಲಿದ್ದವರ ಕಣ್ಣನ್ನೂ ತೇವಗೊಳಿಸಿತು.




