ಬೆಂಗಳೂರು: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ) ಸಮಗ್ರ ಹಾಗೂ ಒಳಗೊಳ್ಳುವಿಕೆಯಿಂದ ಕೂಡಿದ ಅಭಿವೃದ್ಧಿಯ ನಿಜವಾದ ಎಂಜಿನ್ಗಳಾಗಿವೆ ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.
ನಗರದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ಜಾಗತಿಕ ಎಂಎಸ್ಎಂಇ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಂಎಸ್ಎಂಇಗಳು ಕೇವಲ ಆರ್ಥಿಕ ಉತ್ಪಾದನೆ ಮತ್ತು ರಫ್ತಿಗೆ ಮಾತ್ರ ಕೊಡುಗೆ ನೀಡುವುದಿಲ್ಲ. ಅವು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ನಾವೀನ್ಯತೆಗೆ ಉತ್ತೇಜನ ನೀಡುತ್ತವೆ, ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುತ್ತವೆ ಹಾಗೂ ಜನರಿಗೆ ಅವಕಾಶಗಳನ್ನು ಹತ್ತಿರ ತರುತ್ತವೆ ಎಂದು ಹೇಳಿದರು.
ತಂತ್ರಜ್ಞಾನ, ಸುಸ್ಥಿರತೆ ಹಾಗೂ ಪೂರೈಕೆ ಸರಪಳಿಗಳಿಂದ ಜಾಗತಿಕ ಆರ್ಥಿಕ ವ್ಯವಸ್ಥೆ ಮರುರೂಪಗೊಳ್ಳುತ್ತಿರುವ ಸಂದರ್ಭದಲ್ಲಿ ಸ್ಪರ್ಧಾತ್ಮಕ ಹಾಗೂ ಸ್ಥಿರ ಆರ್ಥಿಕ ವ್ಯವಸ್ಥೆ ನಿರ್ಮಾಣದಲ್ಲಿ ಎಂಎಸ್ಎಂಇಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಅವರು ತಿಳಿಸಿದರು.
ಡಿಜಿಟಲ್ ವಾಣಿಜ್ಯದಿಂದ ಸಣ್ಣ ಪ್ರಮಾಣದ ಉದ್ಯಮಗಳಿಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ದೊರೆತಿದೆ. ಸೂಕ್ತ ತಂತ್ರಜ್ಞಾನ, ಮಾರುಕಟ್ಟೆ ಪ್ರವೇಶ ಮತ್ತು ಅಗತ್ಯ ಬೆಂಬಲ ದೊರೆತರೆ ಎಂಎಸ್ಎಂಇಗಳು ವಿಸ್ತರಣೆಯಾಗಲು, ಹೊಸತನ ಅಳವಡಿಸಿಕೊಳ್ಳಲು ಹಾಗೂ ಜಾಗತಿಕ ಮೌಲ್ಯ ಸರಪಳಿಯ ಭಾಗವಾಗಲು ಅಪಾರ ಅವಕಾಶಗಳಿವೆ ಎಂದು ಹೇಳಿದರು.
ಪಾರದರ್ಶಕ, ತಂತ್ರಜ್ಞಾನ ಸ್ನೇಹಿ ಹಾಗೂ ಹೂಡಿಕೆದಾರರಿಗೆ ಅನುಕೂಲಕರವಾದ ಕೈಗಾರಿಕಾ ವಾತಾವರಣ ನಿರ್ಮಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಅವರು, ಡಿಜಿಟಲ್ ವೇದಿಕೆಗಳು, ಸ್ವಯಂಚಾಲಿತ ವ್ಯವಸ್ಥೆಗಳು, ಕೃತಕ ಬುದ್ಧಿಮತ್ತೆ (ಎಐ), ಇಂಡಸ್ಟ್ರಿ 4.0 ಪರಿಹಾರಗಳು ಹಾಗೂ ಇ-ವಾಣಿಜ್ಯ ಪರಿಸರ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯದ ಮೇಲೆ ಎಂಎಸ್ಎಂಇಗಳ ಭವಿಷ್ಯ ಅವಲಂಬಿತವಾಗಿರಲಿದೆ ಎಂದರು.
ಉದ್ಯಮಿಗಳ ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರದ ಪಾತ್ರವನ್ನು ಉಲ್ಲೇಖಿಸಿದ ಅವರು, ಬ್ಯಾಂಕ್ಗಳ ಸಹಯೋಗ ಮತ್ತು ಆರ್ಸೆಟ್ಟಿ ಸಂಸ್ಥೆಗಳ ಪುನರ್ರಚನೆಯಿಂದ ಡಿಜಿಟಲ್ ಆಡಳಿತ ಹಾಗೂ ಸಾಮರ್ಥ್ಯ ವೃದ್ಧಿಗೆ ಉತ್ತೇಜನ ದೊರೆಯಲಿದೆ ಎಂದು ಹೇಳಿದರು.
“ನಮ್ಮ ಯುವಜನತೆಯೇ ನಮ್ಮ ದೊಡ್ಡ ಶಕ್ತಿ. ಕೈಗಾರಿಕೆಗಳ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದರೆ, ಭವಿಷ್ಯಕ್ಕೆ ಸಜ್ಜಾಗಿರುವ ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಮಾನವ ಸಂಪನ್ಮೂಲವನ್ನು ನಿರ್ಮಿಸಬಹುದು” ಎಂದು ಹೇಳಿದರು.
ಮಹಿಳಾ ಉದ್ಯಮಿಗಳು, ಗ್ರಾಮೀಣ ಉದ್ಯಮಗಳು ಹಾಗೂ ಮೊದಲ ತಲೆಮಾರಿನ ಉದ್ಯಮಿಗಳಿಗೆ ಹೆಚ್ಚಿನ ಬೆಂಬಲ ನೀಡುವ ಮೂಲಕ ಸಮಾನ ಮತ್ತು ಒಳಗೊಳ್ಳುವಿಕೆಯಿಂದ ಕೂಡಿದ ಅಭಿವೃದ್ಧಿ ಸಾಧಿಸಲು ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಅವರು ತಿಳಿಸಿದರು.
“ಎಂಎಸ್ಎಂಇಗಳನ್ನು ಬದುಕುಳಿಯುವ ಹಂತದಿಂದ ಬೆಳವಣಿಗೆಯ ಹಂತಕ್ಕೆ, ಸ್ಥಳೀಯ ಮಾರುಕಟ್ಟೆಯಿಂದ ಜಾಗತಿಕ ಮಾರುಕಟ್ಟೆಗೆ ಹಾಗೂ ಕನಸುಗಳಿಂದ ಸಾಧನೆಯತ್ತ ಕೊಂಡೊಯ್ಯೋಣ” ಎಂದು ಶಾಲಿನಿ ರಜನೀಶ್ ಕರೆ ನೀಡಿದರು.




