ಆಯ್ದ 10 ಕನ್ನಡ ಕಿರುಚಿತ್ರಗಳ ಪ್ರದರ್ಶನ; ವಿಜೇತ ನಿರ್ದೇಶಕಿಗೆ ₹1 ಲಕ್ಷ ನಗದು ಬಹುಮಾನ
ಬೆಂಗಳೂರು: ಮಹಿಳಾ ನಿರ್ದೇಶಕಿಯರ ಪ್ರತಿಭೆ, ಮಹಿಳಾ ದೃಷ್ಟಿಕೋನ ಮತ್ತು ಸಮಾಜಮುಖಿ ಕಥಾವಸ್ತುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿರುವ ‘ಅವಳ ಹೆಜ್ಜೆ ಕಿರುಚಿತ್ರೋತ್ಸವ 2026’ ಇದೇ ಮೇ 24ರಂದು ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿದೆ.
ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಮಹಿಳೆಯರು ನಿರ್ದೇಶಿಸಿರುವ ಆಯ್ದ 10 ಕನ್ನಡ ಕಿರುಚಿತ್ರಗಳ ಪ್ರದರ್ಶನ ನಡೆಯಲಿದ್ದು, ಅತ್ಯುತ್ತಮ ಕಿರುಚಿತ್ರಕ್ಕೆ ‘ಅವಳ ಹೆಜ್ಜೆ ಪ್ರಶಸ್ತಿ’ಯಾಗಿ ₹1 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಕೆಲವು ಚಿತ್ರಗಳಿಗೆ ₹10 ಸಾವಿರ ಮೆಚ್ಚುಗೆಯ ಬಹುಮಾನವೂ ಘೋಷಿಸಲಾಗಿದೆ.
ಮಹಿಳಾ ಸಬಲೀಕರಣವೇ ಟ್ರಸ್ಟ್ನ ಉದ್ದೇಶ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಪ್ರತಿನಿಧಿಗಳು, ಗುಬ್ಬಿವಾಣಿ ಟ್ರಸ್ಟ್ನಲ್ಲಿ “ಜನಗಣ” ಮತ್ತು “ಅವಳ ಹೆಜ್ಜೆ” ಎಂಬ ಎರಡು ವಿಭಾಗಗಳಿದ್ದು, ಮಹಿಳಾ ಸಬಲೀಕರಣ, ಅರಿವು ಕಾರ್ಯಕ್ರಮಗಳು ಹಾಗೂ ಕೌಶಲಾಭಿವೃದ್ಧಿ ಚಟುವಟಿಕೆಗಳ ಮೂಲಕ ಮಹಿಳೆಯರಿಗೆ ಬೆಂಬಲ ನೀಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಭಾಗವಹಿಸುವುದಷ್ಟೇ ಅಲ್ಲದೆ, ನೀತಿ-ನಿರ್ಧಾರ ಮಾಡುವ ಉನ್ನತ ಸ್ಥಾನಗಳಲ್ಲಿಯೂ ಮಹಿಳೆಯರ ಸಂಖ್ಯೆ ಹೆಚ್ಚಬೇಕು ಎಂಬುದು ಟ್ರಸ್ಟ್ನ ಆಶಯವಾಗಿದೆ ಎಂದು ಹೇಳಿದರು.
ಸಿನಿಮಾ ಮಾಧ್ಯಮದ ಮೂಲಕ ಮಹಿಳಾ ದೃಷ್ಟಿಕೋನ
ಸಿನಿಮಾ ಒಂದು ಪರಿಣಾಮಕಾರಿ ದೃಶ್ಯ ಮಾಧ್ಯಮವಾಗಿದ್ದು, ಮಹಿಳೆಯರ ಅನುಭವ, ಸಾಧನೆ ಮತ್ತು ಮಹಿಳಾ ದೃಷ್ಟಿಕೋನದ ಕಥಾವಸ್ತುಗಳನ್ನು ಕಡಿಮೆ ಸಮಯದಲ್ಲಿ ಹೆಚ್ಚಿನ ಜನರಿಗೆ ತಲುಪಿಸುವ ಶಕ್ತಿ ಅದಕ್ಕಿದೆ. ಇದೇ ಕಾರಣಕ್ಕಾಗಿ ಕಿರುಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ವಿವರಿಸಿದರು.
ಮಹಿಳೆಯರು ಕ್ಯಾಮೆರಾ ಹಿಂದೆ ಕೆಲಸ ಮಾಡುವ ಕ್ಷೇತ್ರಗಳಲ್ಲಿ ಹೆಚ್ಚು ಗುರುತಿಸಿಕೊಳ್ಳಬೇಕು. ಮಹಿಳಾ ನಿರ್ದೇಶಕಿಯರ ಕೆಲಸ ಸಮಾಜದ ಮೂಲೆಮೂಲೆಗೂ ತಲುಪಬೇಕು ಎಂಬ ಉದ್ದೇಶದಿಂದಲೇ ‘ಅವಳ ಹೆಜ್ಜೆ’ ಆರಂಭಿಸಲಾಗಿದೆ ಎಂದು ಹೇಳಿದರು.
ಅಮೆರಿಕದ ಕನ್ನಡತಿಯ ಚಿತ್ರಕ್ಕೂ ಆಯ್ಕೆ
ಈ ವರ್ಷದ ಸ್ಪರ್ಧೆಗೆ ಕರ್ನಾಟಕದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಅಮೆರಿಕದಲ್ಲಿ ನೆಲೆಸಿರುವ ಕನ್ನಡತಿಯೊಬ್ಬರ ಕಿರುಚಿತ್ರವೂ ಬಂದಿದ್ದು, ಅದು ಪ್ರದರ್ಶನಕ್ಕೆ ಆಯ್ಕೆಯಾಗಿದೆ ಎಂಬುದು ವಿಶೇಷವಾಗಿದೆ.
ನವೆಂಬರ್ ತಿಂಗಳಿಂದ ಕಿರುಚಿತ್ರಗಳನ್ನು ಆಹ್ವಾನಿಸಲಾಗಿದ್ದು, ಒಟ್ಟು 27 ಕಿರುಚಿತ್ರಗಳು ಬಂದಿದ್ದವು. ಅವುಗಳಲ್ಲಿ ಸ್ಪರ್ಧಾತ್ಮಕ ಆಯ್ಕೆ ಪ್ರಕ್ರಿಯೆಯ ಮೂಲಕ 10 ಚಿತ್ರಗಳನ್ನು ಅಂತಿಮಗೊಳಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.
ಆಯ್ಕೆಯಾದ 10 ಕಿರುಚಿತ್ರಗಳು
‘ಕಾಶಿ ಕೈಲಾಸ’, ‘ಸೋರುತಿಹುದು ಮನೆಯ ಮಾಳಿಗಿ’, ‘ರೊಟ್ಟಿ’, ‘ಎ ಲಿಟ್ಸ್ ಕೇರ್’, ‘ಹುಲಿಯಪ್ಪ’, ‘ದಾರಿ’, ‘ಮೌನ ರಾಗ’, ‘ಆ ಮಾಡಿ’, ‘ಗೆಜ್ಜೆ’ ಹಾಗೂ ‘ನಿತ್ಯ’ ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.
ತೀರ್ಪುಗಾರರ ತಂಡ
ಸಂಗೀತಾ ನಂಜುಂಡಸ್ವಾಮಿ, ದೀಪ್ತಿ ಮೂರ್ತಿ ಅಯ್ಯರ್ ಹಾಗೂ ಸುಮನಾ ಚಂದ್ರಗಿರಿ ಅವರನ್ನು ಒಳಗೊಂಡ ತೀರ್ಪುಗಾರರ ತಂಡ ಚಿತ್ರಗಳನ್ನು ಆಯ್ಕೆ ಮಾಡಿದೆ. ಕಥಾವಸ್ತು, ತಾಂತ್ರಿಕ ಗುಣಮಟ್ಟ, ಸಿನಿಮಾಟೋಗ್ರಫಿ, ಧ್ವನಿ ವಿನ್ಯಾಸ ಮತ್ತು ಮಹಿಳಾ ದೃಷ್ಟಿಕೋನವನ್ನು ಆಧಾರವಾಗಿಸಿಕೊಂಡು ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ ಎಂದು ಸಂಘಟಕರು ತಿಳಿಸಿದರು.
ನಿರ್ದೇಶಕಿ ಮಹಿಳೆಯಾಗಿರಬೇಕು
ಚಿತ್ರೋತ್ಸವಕ್ಕೆ ಸಲ್ಲಿಸಲಾದ ಚಿತ್ರಗಳಲ್ಲಿ ನಿರ್ದೇಶಕಿ ಮಹಿಳೆಯಾಗಿರುವುದು ಕಡ್ಡಾಯವಾಗಿತ್ತು. ನಟರು, ತಾಂತ್ರಿಕ ತಂಡ ಅಥವಾ ಕಥೆಗಾರರು ಯಾರೇ ಆಗಿರಬಹುದು. ಆದರೆ ಚಿತ್ರದಲ್ಲಿ ಮಹಿಳಾ ದೃಷ್ಟಿಕೋನ ಪ್ರತಿಬಿಂಬಿಸಬೇಕು ಎಂಬುದೇ ಮುಖ್ಯ ಉದ್ದೇಶ ಎಂದು ವಿವರಿಸಲಾಯಿತು.
2024ರಿಂದ 2026ರ ಅವಧಿಯಲ್ಲಿ ನಿರ್ಮಾಣಗೊಂಡಿರುವ, ಕನಿಷ್ಠ 5 ನಿಮಿಷ ಮತ್ತು ಗರಿಷ್ಠ 30 ನಿಮಿಷ ಅವಧಿಯ ಕನ್ನಡ ಕಿರುಚಿತ್ರಗಳಿಗೆ ಅವಕಾಶ ನೀಡಲಾಗಿತ್ತು ಎಂದು ತಿಳಿಸಿದರು.
ಪ್ರಶ್ನೋತ್ತರ ಮತ್ತು ಚರ್ಚಾಗೋಷ್ಠಿ
ಚಿತ್ರ ಪ್ರದರ್ಶನದ ನಂತರ ನಿರ್ದೇಶಕಿಯರೊಂದಿಗೆ ಪ್ರೇಕ್ಷಕರ ಪ್ರಶ್ನೋತ್ತರ ಕಾರ್ಯಕ್ರಮವೂ ನಡೆಯಲಿದೆ. ಜೊತೆಗೆ “ಸಿನೆಮಾದಲ್ಲಿ ಅವಳ ಹೆಜ್ಜೆ: ಅ – ಅಃ ವರೆಗೆ” ವಿಷಯದ ಚರ್ಚಾಗೋಷ್ಠಿಯನ್ನು ಆಯೋಜಿಸಲಾಗಿದೆ.
ನೀತು ಶೆಟ್ಟಿ, ಗ್ರೀಷ್ಮಾ ಶ್ರೀಧರ್, ಸಂಗೀತಾ ನಂಜುಂಡಸ್ವಾಮಿ ಹಾಗೂ ಸಂಜೋತಾ ಭಂಡಾರಿ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಚಿತ್ರೋತ್ಸವ ನಿರ್ದೇಶಕಿ ಶಾಂತಲಾ ದಾಮ್ಲೆ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಂತ್ಯದಲ್ಲಿ ಪ್ರಶಸ್ತಿ ಪ್ರದಾನ
ದಿನಪೂರ್ತಿ ನಡೆಯುವ ಚಿತ್ರೋತ್ಸವದ ಕೊನೆಯಲ್ಲಿ ಗೌರವಾನ್ವಿತ ಅತಿಥಿಗಳ ಸಮ್ಮುಖದಲ್ಲಿ ವಿಜೇತರ ಘೋಷಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸ್ಥಾಪಕ ಟ್ರಸ್ಟಿ ಮಾಲವಿಕ ಗುಬ್ಬಿವಾಣಿ, ಚಿತ್ರೋತ್ಸವ ನಿರ್ದೇಶಕಿ ಶಾಂತಲಾ ದಾಮ್ಲೆ ಹಾಗೂ ಚಿತ್ರ ಸಮಿತಿ ಮುಖ್ಯಸ್ಥೆ ಉಷಾ ಸಂಪತ್ ಕುಮಾರ್ ಉಪಸ್ಥಿತರಿದ್ದರು.




