ಬೆಂಗಳೂರು: ಬಕ್ರೀದ್ ಸಂದರ್ಭದಲ್ಲಿ ರಾಜ್ಯದಲ್ಲಿ ಗೋವಂಶದ ಹತ್ಯೆ, ಹಿಂಸೆ ಹಾಗೂ ಕುರ್ಬಾನಿ ಸಂಪೂರ್ಣವಾಗಿ ತಡೆಯಲು ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ವಿಶ್ವ ಹಿಂದೂ ಪರಿಷದ್ ಆಗ್ರಹಿಸಿದೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಹಿಂಪ ಮುಖಂಡರು, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯಿದೆ-2020 ಅನ್ವಯ ದನ, ಹೋರಿ, ಕರು ಹಾಗೂ 13 ವರ್ಷದೊಳಗಿನ ಎಮ್ಮೆ ಮತ್ತು ಕೋಣಗಳ ಹತ್ಯೆ, ಹಿಂಸೆ ಹಾಗೂ ಬಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿದರು.
ಗೋವಂಶದ ಹತ್ಯೆ ಅಥವಾ ಕುರ್ಬಾನಿ ನಡೆದ ಸ್ಥಳಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಕಾನೂನು ಹೇಳುತ್ತಿದ್ದು, ಒಂದು ಜಾನುವಾರು ಬಲಿಯಾದರೂ ಸಂಬಂಧಿಸಿದ ಕಟ್ಟಡ, ಮನೆ, ಖಾಲಿ ಜಾಗ ಅಥವಾ ಇತರೆ ಸ್ಥಳಗಳನ್ನು ಸರ್ಕಾರ ವಶಕ್ಕೆ ಪಡೆಯುವ ಕ್ರಮ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು
ಗೋವಂಶದ ಹತ್ಯೆ, ಹಿಂಸೆ ಹಾಗೂ ಅಕ್ರಮ ಸಾಗಾಟ ತಡೆಯಲು ಪೊಲೀಸರು ತಮ್ಮ ಸಂಪೂರ್ಣ ಅಧಿಕಾರ ಬಳಸಬೇಕು. ಬೀಟ್ ಪೊಲೀಸ್ ಹಾಗೂ ವಿಚಕ್ಷಣಾ ವ್ಯವಸ್ಥೆ ಮೂಲಕ ಮುಂಚಿತ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಬೇಕು. ಮಾಹಿತಿ ಇದ್ದರೂ ನಿರ್ಲಕ್ಷ್ಯ ವಹಿಸಿ ಗೋಹತ್ಯೆ ನಡೆದರೆ ಸಂಬಂಧಿಸಿದ ಸಿಬ್ಬಂದಿಯನ್ನು ಅಮಾನತು ಮಾಡಿ ಇಲಾಖಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೇ 28ರವರೆಗೆ ರಾಜ್ಯಾದ್ಯಂತ ವಿಶೇಷ ಬಂದೋಬಸ್ತ್ ಮಾಡಬೇಕು. ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಿ ವಾಹನಗಳ ತಪಾಸಣೆ ನಡೆಸಬೇಕು. ವಿಶೇಷವಾಗಿ ಮುಚ್ಚಿದ ಟ್ಯಾಂಕರ್ಗಳ ಪರಿಶೀಲನೆ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.
ಹೆಚ್ಚುವರಿ ಪಡೆ, ತಂತ್ರಜ್ಞಾನ ಬಳಕೆಗೆ ಸಲಹೆ
ಅಗತ್ಯವಿರುವ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಹಾಗೂ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಬೇಕು. ಗೋ ಕಳ್ಳತನ ಪ್ರಕರಣಗಳಲ್ಲಿ ತಕ್ಷಣ ಪೊಲೀಸ್ ನಾಯಿಗಳ ಸಹಾಯ ಪಡೆದು ಕಳ್ಳರನ್ನು ಬಂಧಿಸಬೇಕು ಎಂದು ಹೇಳಿದರು.
ಗೋರಕ್ಷಣೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸುವಂತೆ ಸಲಹೆ ನೀಡಿದ ವಿಹಿಂಪ, ಟೋಲ್ ಪ್ಲಾಜಾ ಹಾಗೂ ಪ್ರಮುಖ ಸ್ಥಳಗಳಲ್ಲಿ ಎಲೆಕ್ಟ್ರಾನಿಕ್ ಸ್ಕ್ಯಾನರ್ ಅಳವಡಿಸಿ ವಾಹನಗಳಲ್ಲಿ ಜಾನುವಾರು ಸಾಗಾಟ ಪತ್ತೆಹಚ್ಚಬೇಕು ಎಂದು ತಿಳಿಸಿತು. ಡ್ರೋನ್ ತಂತ್ರಜ್ಞಾನ ಬಳಸಿ ಅಕ್ರಮ ವಧೆ ನಡೆಯುತ್ತಿರುವ ಮಾಹಿತಿ ಸಂಗ್ರಹಿಸಬೇಕು ಎಂದರು.
ಪುನರಪಿ ಅಪರಾಧಿಗಳನ್ನು ತಕ್ಷಣ ಗುರುತಿಸಿ ಅವರಿಗೆ ಜಾಮೀನು ಸಿಗದಂತೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಅಕ್ರಮ ಜಾಲ ಬೇಧಿಸಲು ಒತ್ತಾಯ
ಅಕ್ರಮ ಗೋಸಾಗಾಟ ಹಾಗೂ ಗೋಮಾಂಸ ಮಾರಾಟದ ದೊಡ್ಡ ಜಾಲ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ವಿಹಿಂಪ ಒತ್ತಾಯಿಸಿತು.
ಅಕ್ರಮ ಸಾಗಾಟಕ್ಕೆ ಬಳಸುವ ವಾಹನಗಳ ಮಾಲಕರನ್ನೂ ಬಂಧಿಸಬೇಕು. ಕಾನೂನು ಪ್ರಕಾರ ವಾಹನ ಮಾಲಕರಿಗೂ ಶಿಕ್ಷೆ ವಿಧಿಸುವ ಅವಕಾಶವಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದ ವಾಹನಗಳ ಮೇಲೂ ನಿಗಾ ಇರಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರ ಸಹಕಾರ ಅಗತ್ಯ
ಗೋಸಂಬಂಧಿ ಅಪರಾಧಗಳನ್ನು ತಡೆಯಲು ಸಾರ್ವಜನಿಕರ ಸಹಕಾರ ಅತ್ಯವಶ್ಯಕ ಎಂದು ಹೇಳಿದ ವಿಹಿಂಪ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 40 ಅನ್ವಯ ಜಾಮೀನು ರಹಿತ ಅಪರಾಧ ಎಸಗುವವರನ್ನು ಸಾರ್ವಜನಿಕರೂ ಬಂಧಿಸಿ ಪೊಲೀಸರಿಗೆ ಒಪ್ಪಿಸಬಹುದಾಗಿದೆ ಎಂದು ತಿಳಿಸಿತು.
ಗೋ ಕಳ್ಳತನ ಮತ್ತು ಗೋಹತ್ಯೆ ತಡೆಯಲು ಪ್ರತಿಯೊಂದು ಗ್ರಾಮದಲ್ಲೂ ಗೋಪಾಲಕರ ಸಹಯೋಗದೊಂದಿಗೆ ಗ್ರಾಮ ಗೋರಕ್ಷ ದಳ ರಚಿಸಲು ಬಜರಂಗ ದಳ ಸಹಕರಿಸುವುದಾಗಿ ಘೋಷಿಸಿತು.
ಗೋಹತ್ಯೆ ಮುಕ್ತ ಬಕ್ರೀದ್ ಆಚರಣೆಗೆ ಕರೆ
ಈ ಬಾರಿ ರಾಜ್ಯದಲ್ಲಿ ಗೋಹತ್ಯೆ ಮುಕ್ತ ಬಕ್ರೀದ್ ಆಚರಣೆ ನಡೆಯಬೇಕು. ಇದರಿಂದ ಸಮಾಜದಲ್ಲಿ ಸೌಹಾರ್ದತೆಯ ಸಂದೇಶ ಹರಡಬೇಕು ಎಂದು ವಿಹಿಂಪ ಕರೆ ನೀಡಿತು.
ಗೋಸಂಬಂಧಿ ಅಪರಾಧ ಕಂಡುಬಂದರೆ ಸಾರ್ವಜನಿಕರು ತಕ್ಷಣ 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಬೇಕು. ಜೊತೆಗೆ ಸ್ಥಳೀಯ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳ ಕಾರ್ಯಕರ್ತರ ಸಹಕಾರ ಪಡೆಯುವಂತೆ ಮನವಿ ಮಾಡಿತು.
ಪೊಲೀಸರು ಗೋವಂಶ ರಕ್ಷಣೆಯಲ್ಲಿ ವಿಫಲವಾದರೆ ಅದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಹಾಗೂ ಅಗತ್ಯವಿದ್ದರೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ವಿಹಿಂಪ ಎಚ್ಚರಿಕೆ ನೀಡಿತು.




