ಬೆಂಗಳೂರು: ಒಳಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ನಡೆಯಬೇಕಿದ್ದ ವಿಶೇಷ ಸಂಪುಟ ಸಭೆಯನ್ನು ಮುಂದೂಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಅಡ್ವೊಕೇಟ್ ಜನರಲ್ (AG) ಅವರ ಸಲಹೆ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಭೆ ಮುಂದೂಡಿಕೆಗೆ ಕಾರಣವೇನು?
ಸಭೆ ನಡೆಸಿದ ನಂತರ ಅದರ ತೀರ್ಮಾನಗಳು ಹೊರಗೆ ಸೋರಿಕೆಯಾದರೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದ್ದು, ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆ ಸಭೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು.
RCB ಟಿಕೆಟ್ ಬೇಡಿಕೆ ವಿಚಾರ
ಶಾಸಕರು RCB ಪಂದ್ಯಗಳ ಟಿಕೆಟ್ ಕೇಳುವುದರಲ್ಲಿ ತಪ್ಪೇನೂ ಇಲ್ಲ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು. ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿಲ್ಲ. RCB ಹಾಗೂ KSCA ಇದನ್ನು ಹೇಗೆ ನಿರ್ವಹಿಸುತ್ತವೆ ಎಂಬುದು ಅವರದ್ದೇ ತೀರ್ಮಾನವಾಗಿರುತ್ತದೆ ಎಂದು ಹೇಳಿದರು. ದುರಂತ ಹಿನ್ನೆಲೆ ಕೆಲವು ಶಿಫಾರಸ್ಸುಗಳೊಂದಿಗೆ ಪಂದ್ಯಗಳಿಗೆ ಅನುಮತಿ ನೀಡಲಾಗಿದೆ ಎಂದರು.
ತುಮಕೂರು ನಕಲಿ ಆದೇಶ ಪತ್ರ ಪ್ರಕರಣ
ತುಮಕೂರಿನಲ್ಲಿ ಅರಣ್ಯ ಇಲಾಖೆಯ ನಕಲಿ ಆದೇಶ ಪತ್ರ ತಯಾರಿಕೆ ಜಾಲ ಪತ್ತೆಯಾದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆರೋಪಿಯು ತಮ್ಮ ಪರಿಚಯಸ್ಥ ಎನ್ನುವ ಆರೋಪಗಳನ್ನು ತಳ್ಳಿ ಹಾಕಿದರು.
“ಈ ವಿಷಯದ ಬಗ್ಗೆ ಅಧಿಕಾರಿಗಳೊಂದಿಗೆ ಮಾತಾಡಿ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇವೆ. ಎಲ್ಲ ಪ್ರಕರಣಗಳಿಗೂ ಗೃಹ ಸಚಿವರ ಲಿಂಕ್ ಕಲ್ಪಿಸುವುದು ಸರಿಯಲ್ಲ,” ಎಂದು ಹೇಳಿದರು.
ವೈಯಕ್ತಿಕ ಆರೋಪಗಳ ಬಗ್ಗೆ ಅಸಮಾಧಾನ
“ನಮ್ಮ ಕಾಲೇಜಿನಲ್ಲಿ ನಡೆದ ಘಟನೆಗೂ ನನ್ನ ಹೆಸರು ಸಂಪರ್ಕಿಸಲಾಗುತ್ತಿದೆ. ಇದು ಅನಾವಶ್ಯಕ. ಆ ಘಟನೆಗೆ ನಾನು ಹೊಣೆಗಾರನಲ್ಲ. ಆಡಳಿತ ಮಂಡಳಿ ಈಗಾಗಲೇ ಕ್ರಮ ಕೈಗೊಂಡಿದೆ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪೆಟ್ರೋಲ್-ಡೀಸೆಲ್ ಸೆಸ್ ಇಳಿಕೆ ವಿಚಾರ
ಕೇಂದ್ರ ಸರ್ಕಾರ ಸೆಸ್ ಇಳಿಸಿದ ಹಿನ್ನೆಲೆಯಲ್ಲಿ ರಾಜ್ಯವೂ ಇಳಿಸಬೇಕೇ ಎಂಬ ಪ್ರಶ್ನೆಗೆ, ಮುಖ್ಯಮಂತ್ರಿ ಅವರೇ ಹಣಕಾಸು ಸಚಿವರಾಗಿದ್ದು, ಅವರು ಪರಿಸ್ಥಿತಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು. ಸಂಪುಟದಲ್ಲಿ ಚರ್ಚೆಗೆ ಬಂದರೆ ಚರ್ಚೆ ನಡೆಸಲಾಗುತ್ತದೆ ಎಂದರು.
ಉಪಚುನಾವಣೆಯಲ್ಲಿ ಬಂಡಾಯ
ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಬಂಡಾಯ ವಿಚಾರ ಸಹಜ ಎಂದು ಪರಮೇಶ್ವರ್ ಹೇಳಿದರು. “ಎಲ್ಲ ಪಕ್ಷಗಳಲ್ಲೂ ಬಂಡಾಯ ಇರುತ್ತದೆ. ಅದನ್ನು ಸರಿಪಡಿಸಿಕೊಂಡು ಚುನಾವಣೆ ಎದುರಿಸುತ್ತೇವೆ,” ಎಂದರು.
ಎಸಿಪಿಗಳ ಭೇಟಿ
ಕೆಲವು ಬಡ್ತಿ ಸಂಬಂಧಿತ ವಿಚಾರಗಳ ಬಗ್ಗೆ ಎಸಿಪಿಗಳು ತಮ್ಮನ್ನು ಭೇಟಿ ಮಾಡಿದ್ದಾರೆ. 20:80 ಅನುಪಾತದ ನೇಮಕಾತಿ ನಿಯಮದ ಬಗ್ಗೆ ಕೆಲವು ಗೊಂದಲಗಳಿದ್ದು, ಕೋರ್ಟ್ಗೆ ಹೋಗದವರು ಭೇಟಿಗೆ ಬಂದಿದ್ದಾರೆ ಎಂದು ವಿವರಿಸಿದರು.
ಸಂಪುಟ ಪುನಾರಚನೆ ಬಗ್ಗೆ ಪ್ರತಿಕ್ರಿಯೆ
ಸಂಪುಟ ಪುನಾರಚನೆ ಬಗ್ಗೆ ಮುಖ್ಯಮಂತ್ರಿ ಮಾತ್ರ ಅಧಿಕೃತವಾಗಿ ಮಾತನಾಡಬೇಕು ಎಂದು ಪರಮೇಶ್ವರ್ ಹೇಳಿದರು. “ಸಚಿವರಾಗಲು ಎಲ್ಲರೂ ಸಮರ್ಥರು, ಅವಕಾಶ ಯಾರಿಗೆ ಸಿಗುತ್ತದೋ ಅವರು ಸಚಿವರಾಗುತ್ತಾರೆ,” ಎಂದರು.
ಒಳಮೀಸಲಾತಿ ವಿವಾದ
ಒಳಮೀಸಲಾತಿ ವಿಚಾರದಲ್ಲಿ ಎಡಗೈ-ಬಲಗೈ ಸಮುದಾಯಗಳ ನಡುವಿನ ಜಟಾಪಟಿ ಕುರಿತು ಮಾತನಾಡಿದ ಅವರು, “ಎಲ್ಲ ಸಮುದಾಯಗಳು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿವೆ. ಸರ್ಕಾರ ಕಾನೂನು ಚೌಕಟ್ಟಿನೊಳಗೆ ತೀರ್ಮಾನ ಕೈಗೊಳ್ಳುತ್ತದೆ,” ಎಂದು ಹೇಳಿದರು.




